Janapada annual cultural event

Janapada annual cultural event

Pleased to share the pictures of Janapada Seva Trust’s annual cultural event. Our weavers, dyers, tailors and others performed a play as a part of the program. We thank all our patrons for being co-travelers and making such a memorable event possible.

ಕಳೆದ ವರ್ಷದ ಡಿಸೆಂಬರ್ 31 ರಂದು ಜನಪದ ಸೇವಾ ಟ್ರಸ್ಟ್ ನ ಕಾರ್ಯಕರ್ತರೆಲ್ಲ ಸೇರಿಕೊಂಡು ‘ಊರು ಸುಟ್ಟರೂ ಹನುಮಪ್ಪ ಹೊರಗೆ' ಎಂಬ ನಾಟಕವನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಪ್ರದರ್ಶಿಸಿದರು. ಖಾದಿ ಸೇರಿದಂತೆ ಟ್ರಸ್ಟಿನ ಇತರೆ ಅನೇಕ ಕೆಲಸಗಳಲ್ಲಿ ತೊಡಗಿಕೊಂಡವರು ಸೇರಿಕೊಂಡು ಕೇವಲ 15 ದಿನದ ಕಾಲಾವಕಾಶದಲ್ಲಿ ತಾಲೀಮು ಮಾಡಿ ನಾಟಕವನ್ನು ಅದ್ಭುತವಾಗಿ ನಮ್ಮೆಲ್ಲರ ಮುಂದಿಟ್ಟರು.

ಕೆಲಸಗಾರರನ್ನು ಕೇವಲ ಉತ್ಪಾದನಾ ಕೇಂದ್ರಿತ ವ್ಯವಸ್ಥೆಗೆ ಸೀಮಿತಗೊಳಿಸದೇ, ವ್ಯಕ್ತಿತ್ವ ವಿಕಸನದ ವಿವಿಧ ಹಂತಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಈ ಚಟುವಟಿಕೆಯ ಮುಖ್ಯ ಉದ್ದೇಶವಾಗಿತ್ತು.
ಹಲವಾರು ಕಾರಣಗಳಿಂದ ಭಯ, ಮುಜುಗರ, ಹಿಂಜರಿಕೆಯಂತಹ ಗೋಡೆಗಳ ಮಧ್ಯೆ ಬಂಧಿತರಾದವರು, ಅದರಿಂದ ಧೈರ್ಯವಾಗಿ ಹೊರಗೆ ಬಂದು ನಾವೆಲ್ಲರೂ ಆಶ್ಚರ್ಯ ಪಡುವಂತೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ನಾಟಕದ ಮೂಲಕ ಜೊತೆಗೂಡಿ ಕೆಲಸ ಮಾಡುವುದು, ತಮ್ಮನ್ನು ತಾವು ಎಲ್ಲರ ಮುಂದೆ ವಿಮರ್ಶಿಸಿಕೊಳ್ಳುವುದು, ಜೊತೆಗಾರರ ಪಾತ್ರವನ್ನು ವಿಮರ್ಶಿಸುವುದು, ಆ ರೀತಿಯ ಚರ್ಚೆಗಳು ನಡೆದಾಗ ಎಲ್ಲರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮಟ್ಟಿಗೆ ಹೋದದ್ದು ನಮ್ಮೆಲ್ಲರಿಗೂ ಅತ್ಯಂತ ಸಂತಸ ಹಾಗೂ ತೃಪ್ತಿ ಕೊಟ್ಟ ವಿಚಾರ.

ಟ್ರಸ್ಟಿನ ಭಾಗವಾಗಿ ದುಡಿದ ಅನೇಕರಿಗೆ, ನಾಟಕದ ಒಬ್ಬೊಬ್ಬ ಪಾತ್ರಧಾರಿಯೂ ಮೈಛಳಿ ಬಿಟ್ಟು ತಮ್ಮನ್ನು ತಾವು ಪ್ರಸ್ತುತಪಡಿಸಿಕೊಂಡ ಬಗೆ ನೋಡಿ ಸಾರ್ಥಕದ ಭಾವ ಮೂಡಿತು.

ಇಲ್ಲಿ ನಾಟಕ ಕೇವಲ ಒಂದು ‘ನಾಟಕ’ವಾಗಿತ್ತು! ಅದರ ಮೂಲಕ ನಡೆದ ಸ್ವ-ಅನ್ವೇಷಣೆಯ ಪ್ರಯತ್ನಗಳು ನಮ್ಮೆಲ್ಲರ ವಿಕಸನಕ್ಕೆ ದಾರಿ ಮಾಡಿಕೊಟ್ಟವು.

ಹದಿನೈದೇ ದಿನದಲ್ಲಿ ತಂಡವನ್ನು ತರಬೇತುಗೊಳಿಸಿ ನಿರ್ದೇಶಿಸಿದವರು - ಯುವ ರಂಗ ಕಲಾವಿದೆ, ಗಂಗಾ ಕಾಳೇನವರ

  |  

More Posts